Monday 7 July, 2008

ಮಳೆ ನಿಂತು ಹೋದ ಮೇಲೆ ಒಂದು ಸೀರಿಯಸ್ ಬರಹ

ಮೊನ್ನೆ ಭೇಟಿಯಾದ ಸ್ನೇಹಿತರೊಬ್ಬರು ನೀನು ಬ್ಲಾಗಿನಲ್ಲಿ ಇನ್ನು ಮಳೆ, ಭಾವುಕತೆ ಅಂತೆಲ್ಲಾ ಬಿಟ್ಟು ಸ್ವಲ್ಪ ಸೀರಿಯಸ್ ಆಗಿ ಬೇರೆ ಏನಾದರೂ ಬರಿ ಅಂತ ಹೇಳಿದ್ದರು. ಜೊತೆಗೆ `ಮಳೆ ನಿಂತು ಹೋದ ಮೇಲೆ` ಅಂತಿರುವ ನಿನ್ನ ಕಾಲರ್ ಟೂನ್ ಕೂಡ ಚೇಂಜ್ ಮಾಡಿಸು ಎಂದು ಉಪದೇಶ ನೀಡಿದ್ದರು. ಬ್ಲಾಗು - ಮಳೆ - ಕಾಲರ್ ಟೂನ್ ಇದು ಮೂರಕ್ಕೂ ಇರುವ ಸಂಬಂಧವನ್ನು ಹುಡುಕುತ್ತಾ ನಾನು ಹೊಸದಾಗಿ ಏನು ಬರೆಯಲಿ ಎಂದು ಸ್ವಲ್ಪ ಸೀರಿಯಸ್ ಆಗಿಯೇ ವಿಚಾರ ಮಾಡಿದ್ದೆ. ಹಾಗಿರುವಾಗಲೇ ಮತ್ತೊಬ್ಬ ಬ್ಲಾಗಿಗರು ತುಂಬಾ ಖುಷಿಯಿಂದ ಧಾರವಾಡದಿಂದ ಒಂದು ಹುಡುಗಿ ಬ್ಲಾಗಿನಲ್ಲಿ ಬರೆಯುತ್ತಾಳೆ, ನೀನು ನೋಡಬೇಕು ಜೋಮನ್, ಅವಳು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಲೇಖನ ಬರೆಯುತ್ತಾಳೆ ಎಂದಿದ್ದರು.

ಹೌದಾ? ಹಾಗಾದರೆ ನಿಜವಾಗಿಯೂ ಆಕೆಗೇನಾದರೂ ತೊಂದರೆ ಇರಬೇಕು ಎಂದು ತಮಾಷೆ ಮಾಡಿದ್ದೆ. ನಾಲ್ಕು ಗಂಟೆಗೆ ಎದ್ದು ಬಿಸಿ ನೀರಿನಲ್ಲಿ ಸ್ನಾನ ಮಾಡಿ, ದೇವರನ್ನು ಮನಸ್ಸಿನಲ್ಲಿ ಧ್ಯಾನಿಸಿ, ಲ್ಯಾಪ್ ಟಾಪ್ ತೆಗೆದು, ಅದರಲ್ಲಿರುವ ಗಣಪತಿಯ ಫೋಟೋಗೆ ನಮಿಸಿ, ಕಿಟಕಿಯ ಪಕ್ಕದಲ್ಲಿ ಕುಳಿತು, ಬೀಸಿ ಬರುವ ತಂಗಾಳಿಗೆ ಮುಂಗುರುಳು ಸರಿಸುತ್ತಾ, ಮೃದು ಬೆರಳುಗಳ ತುದಿಯಿಂದ ಆಕೆ ಕಿ ಬೋರ್ಡ್ ಶಬ್ದ ಕೂಡ ಮಾಡದೆ ಒಂದೊಂದೇ ಅಕ್ಷರ ಬರೆಯುತ್ತಿದ್ದರೆ.. ನಾನಿಲ್ಲಿ ಮೈಮೇಲೆ ಆನೆ ಹತ್ತಿ ಇಳಿದರೂ ಎಚ್ಚರವಾಗದಷ್ಟು ಸುಖವಾಗಿ ಮಲಗಿ ನಿದ್ರಿಸುತ್ತಿದ್ದೇನಲ್ಲಾ ಅಂತ ನಗು ಬಂದಿತ್ತು. ನಿದ್ರೆಯನ್ನು ಬಲಿಗೊಟ್ಟು ಮಾಡುವ ಯಾವುದೇ ಕೆಲಸಗಳು ಒಳ್ಳೆಯದಲ್ಲ ಹುಡುಗಿ ಎಂದು ಆಕೆಗೆ ಹೇಳಬೇಕೆನಿಸಿತು.

ಸ್ನೇಹಿತರ ಒತ್ತಾಯವೂ ಅಥವಾ ಹಾಗೆ ಸುಮ್ಮನೆಯೋ ಅಂತೂ ಇಂತೂ ಈ ಬಾರಿ ಸ್ವಲ್ಪ ಸೀರಿಯಸ್ ಆದ ವಿಷಯವೊಂದನ್ನು ಬರೆಯುತ್ತಿದ್ದೇನೆ. ಏನೇ ಬರೆದರೂ ಓದುಗರು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆ ಇದೆ.

ನಿಮಗೆ ಅಪ್ಘಾನಿಸ್ತಾನ ಗೊತ್ತಲ್ಲ. ಅಲ್ಲಿನ ಒಬ್ಬ ಬ್ಲಾಗರ್ ಕುರಿತು ಈ ಕಥೆ. ಈ ಬ್ಲಾಗರ್ ಹೆಸರು ನಸೀಮ್ ಫೆಕ್ರತ್. ಪೆಕ್ರತ್‌ಗೆ ಈಗ ಇಪ್ಪತ್ತೈದು ವರ್ಷ. ಸ್ವಯಂ ತರಬೇತಿ ಪಡೆದ ಪತ್ರಕರ್ತ. ಅಪ್ಘನ್ ಮಾಧ್ಯಮಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವಾಗ ಆತ ತನ್ನ ದೇಶದ ನಿಜವಾದ ಅವಸ್ಥೆಯನ್ನು ಬ್ಲಾಗಿನ ಮೂಲಕ ಜಗತ್ತಿಗೆ ತೆರೆದಿಡುತ್ತಿದ್ದಾನೆ. ನಮ್ಮ ನಿಮ್ಮ ಹಾಗೆ ಆತನದು ಸಾಮಾನ್ಯ ಬ್ಲಾಗ್ ಅಲ್ಲ. ಅದೊಂದು ಪ್ರತಿಭಟನೆಯ ಅಸ್ತ್ರ. ಒಂದು ಪತ್ರಿಕೆ, ಒಂದು ಚಾನೆಲ್ ಮಾಡದ ಕೆಲಸವನ್ನು ಪೆಕ್ರತ್ ಮಾಡುತ್ತಿದ್ದಾನೆ. ವಿದ್ಯುತ್ ಇಲ್ಲದ ರಾತ್ರಿಗಳಲ್ಲಿ ತನ್ನ ಕಾರಿನ ಬ್ಯಾಟರಿಯಿಂದ ಲಾಪ್‌ಟಾಪ್‌ಗೆ ವಿದ್ಯುತ್ ಪೂರೈಸಿಕೊಂಡು ಆತ ಪ್ರಖರ ಬರಹಗಳನ್ನು ಬರೆಯುತ್ತಿದ್ದಾನೆ. ಆತನ ಬ್ಲಾಗ್ ಬರಹಗಳು ಎಷ್ಟೊಂದು ಪರಿಣಾಮಕಾರಿಯಾಗಿವೆಯೆಂದರೆ ಅದು ಅಲ್ಲಿನ ಅಧ್ಯಕ್ಷ ಹಮೀದ್ ಕರ್ಜಾಯಿಗೂ, ಮೂಲಭೂತವಾದಿ ಮುಲ್ಲಾಗಳಿಗೂ ಬಿಸಿ ಮುಟ್ಟಿಸಿದೆ. ಇಷ್ಟೇ ಆಗಿದ್ದರೆ ಅಲ್ಲಿನವರು ಸುಮ್ಮನಿರುತ್ತಿದ್ದರು, ಆದರೆ ಪೆಕ್ರತ್ ಅಫ್ಘನ್ ಬ್ಲಾಗ್ ರೈಟರ್ಸ್ ಅಸೋಸಿಯೇಷನ್ ಪ್ರಾರಂಭಿಸಿದ್ದಾನೆ. ದಕ್ಷಿಣ ಕಾಬೂಲ್‌ನಲ್ಲಿ ಒಂದು ಕಚೇರಿ ಸ್ಥಾಪಿಸಿ ಅಲ್ಲಿ ಯುವಕ ಯುವತಿಯರಿಗೆ ಬ್ಲಾಗ್ ಬರಹಗಳನ್ನು ಹೇಗೆ ಬರೆಯಬೇಕೆಂದು ತರಬೇತಿ ನೀಡುತ್ತಿದ್ದಾನೆ. ಪೆಕ್ರತ್‌ನ ಕುರಿತು ಸ್ಲೇಟ್.ಕಾಂನಲ್ಲಿ Meet Afghanistan's Most Fearless Blogger ಅಂತ ಒಂದು ಸುದ್ದಿ ಪ್ರಕಟವಾಗಿತ್ತು.

ಅಫ್ಘಾನಿಸ್ತಾನವನ್ನೂ, ಪೆಕ್ರತ್‌ನನ್ನು ಇಲ್ಲಿಗೆ ಬಿಡೋಣ. ಒಂದು ಬ್ಲಾಗ್‌ನಿಂದ ಏನೆಲ್ಲಾ ಕೆಲಸ ಮಾಡಬಹುದು ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಇದೀಗ ಅಂತರ್ಜಾಲದಲ್ಲಿ ಕನ್ನಡ ತೀವ್ರಗಾಗಿ ಬೆಳೆಯುತ್ತಿರುವುದು, ದಿನವೂ ಮೂರರಿಂದ ನಾಲ್ಕು ಹೊಸ ಕನ್ನಡ ಬ್ಲಾಗುಗಳು ಹುಟ್ಟಿಕೊಳ್ಳುತ್ತಿರುವುದು, ಜನರು ಹೊಸ ಹೊಸ ವಿಷಯಗಳ ಕುರಿತು ಚರ್ಚೆ ನಡೆಸುತ್ತಿರುವುದು, ಪ್ರತಿಕ್ರಿಯಿಸಿಕೊಳ್ಳುತ್ತಿರುವುದು ಎಲ್ಲಾ ಎಷ್ಟು ಒಳ್ಳೆಯ ಬೆಳವಣಿಗೆ ಎಂದೆನಿಸುತ್ತಿದೆ. ಅಂದಹಾಗೆ ಮತ್ತೊಂದು ಸುದ್ದಿಯೂ ಇದೆ ಕೆಳೆದೆರಡು ವರ್ಷಗಳ ಹಿಂದಿನವರೆಗೆ ಒಟ್ಟು ಬಂಧಿತರಾಗಿರುವ ಬ್ಲಾಗಿರರ ಸಂಖ್ಯೆ ಅರವತ್ಮೂರು. ಹೆಚ್ಚಿನ ಸಂಖ್ಯೆಯ ಬ್ಲಾಗಿಗರು ಬಂಧನಕ್ಕೊಳಗಾಗಿರುವುದು ಚೀನಾ, ಈಜಿಪ್ಟ್, ಮತ್ತು ಇರಾನ್‌ನಲ್ಲಿ. ಇವರಲ್ಲಿ ಹೆಚ್ಚಿನವರು ಸರಕಾರದ ಭ್ರಷ್ಟಾಚಾರದ ವಿರುದ್ಧ ಬರೆದವರು. ಸಾರ್ವಜನಿಕ ನೀತಿಗಳ ವೈಫಲ್ಯವನ್ನು ಖಂಡಿಸಿದವರು. ಮಾನವಹಕ್ಕುಗಳ ಉಲ್ಲಂಘನೆಯ ವಿರುದ್ಧ ಅಕ್ಷರ ಸಮರ ನಡೆಸಿದವರು.

ಬಂಧನಕ್ಕೊಳಗಾಗುವಂತೆ ಬರೆಯುವ ಬ್ಲಾಗಿಗರು ಯಾರೂ ನಮ್ಮ ಕನ್ನಡದಲ್ಲಿ ಇಲ್ಲ ಎನ್ನುವುದೇ ಸದ್ಯದ ಸಮಾಧಾನ. ಇಲ್ಲದಿದ್ದರೆ ಅದಕ್ಕೊಂದು ಕಾನೂನು ರಚಿಸುವುದು ನಮ್ಮ ಸರಕಾರಕ್ಕೆ ದೊಡ್ಡ ತಲೆನೋವಾಗುತ್ತಿತ್ತು. ಬ್ಲಾಗಿನಲ್ಲಿ ಬರೆದುದ್ದಕ್ಕೆ ಇದುವರೆಗೆ ನೀಡಲಾಗಿರುವ ದೊಡ್ಡ ಶಿಕ್ಷೆಯೆಂದರೆ ಎಂಟು ವರ್ಷಗಳ ಜೈಲು ವಾಸ. ಇದನ್ನೆಲ್ಲಾ ಓದಿದ ಮೇಲೆ ನಿಮಗೂ ಸೀರಿಯಸ್ ಆಗಿ ಏನನ್ನಾದರೂ ಬರೆಯಬೇಕು ಎನಿಸಿದರೆ ಖಂಡಿತ ಬರೆಯಿರಿ.

21 comments:

Supreeth.K.S said...

ಬ್ಲಾಗನ್ನು ಅಸ್ತ್ರವಾಗಿ ಬಳಸುವ ಸಾಹಸವನ್ನು ಕನ್ನಡದವರು ಮಾಡಿಲ್ಲ ಎನ್ನುವುದು ನಿಜ. ಅದಕ್ಕೆ ಕನ್ನಡಕ್ಕಿರುವ ವ್ಯಾಪ್ತಿಯೂ ಕಾರಣ ಎನ್ನಿಸುತ್ತದೆ.
ನಿಮ್ಮ ಬರಹ ಓದಿದ ಮೇಲೆಯೂ ಸೀರಿಯಸ್ ಆಗಿ ಬ್ಲಾಗ್ ಬರೆಯಲು ಮನಸ್ಸು ಮಾಡುವವರ ಎದೆಗಾರಿಕಯೆನ್ನು ಮೆಚ್ಚಲೇ ಬೇಕು!
ಮಳೆ ನಿಂತು ಹೋದ ಮೇಲೆ ಬಿಸಿಲು ಕಾಣಬೇಕಲ್ಲವಾ?

ಸುಪ್ರೀತ್.ಕೆ.ಎಸ್

Supreeth.K.S said...

ಅಂದಹಾಗೆ ಆ ಧಾರವಾಡದ ಹುಡುಗಿಯ ಬ್ಲಾಗಿನ ವಿಳಾಸ ಕೊಟ್ಟಿದ್ದರೆ ಚೆನ್ನಿತ್ತು.

Sushrutha Dodderi said...

ಹಹಹಾ! ನಾನಂತೂ ಸೀರಿಯಸ್ಸಾಗಿ ಬರೆಯಲ್ಲಪ್ಪಾ! ಒಂದ್ಸಲ ಬರ್ದು ಸಾಕಾಗಿದೆ. :D

ಅಂಕಿಅಂಶಗಳಿಗೆ ಧನ್ಯವಾದ. ಮತ್ತೆ ಧಾರವಾಡದ ಹುಡುಗಿ ಬಗ್ಗೆ ನೀವು ಕಲ್ಪಿಸಿಕೊಂಡು ಬರೆದದ್ದು ಸೂಪರ್. :D

jomon varghese said...

@ ಸುಪ್ರೀತ್,

ಧನ್ಯವಾದಗಳು ಸುಪ್ರೀತ್, ಹೌದು, ಕನ್ನಡಕ್ಕಿರುವ ವ್ಯಾಪ್ತಿಯೂ ಒಂದು ಕಾರಣ ಇರಬಹುದು ಎನಿಸುತ್ತದೆ. ಮತ್ತೆ, ಹಾಗೆಲ್ಲಾ ಧಾರವಾಡ ಹುಡುಗಿಯ ಬ್ಲಾಗಿನ ವಿಳಾಸ ಕೊಡಲು ಆಗುವುದಿಲ್ಲ ಕಣ್ರೀ.. :)

jomon varghese said...

@ ಸುಶ್ರುತ,

ನೀವೂ ಧೈರ್ಯದಿಂದ ಬರೆಯಿರಿ. ಏನಾಗುತ್ತೋ ನೋಡೋಣ. ಮತ್ತೆ, ಧಾರವಾಡ ಹುಡುಗಿ ಕಲ್ಪಿಸಿಕೊಂಡು ಬರೆದುದ್ದಲ್ಲ.. ನಿಜ. ನೀವು ಸಂಪದ ಓದುತ್ತಿದ್ದರೆ ಈಗಾಗಲೇ ಅವರ ಪರಿಚಯ ಆಗಿರಬೇಕಲ್ವಾ?

Anonymous said...

ಸ್ವಾಮಿ ನಿಮ್ಮ ಮಾತು ಕಟ್ಟಿಕೊಂಡು ಸೀರಿಯಸ್ಸಾಗಿ ಬರೆಯ ಹೊರಟವರ ಗತಿ ಸೀರಿಯಸ್ಸಾದೀತು....

ಅಂದ ಹಾಗೆ ಸುಪ್ರೀತರಂತೆ ನನ್ನದೂ ಒಂದು ಕೋರಿಕೆ
‘ಆ ಧಾರವಾಡದ ಹುಡುಗಿ ಬ್ಲಾಗಿನ ಲಿಂಕ್ ಕೊಟ್ಟಿದ್ದರೆ ಚೆನ್ನಾಗಿತ್ತು...!ಏನಿಲ್ಲವೆಂದರೂ ಹೊತ್ತಲ್ಲದ ಹೊತ್ತಿನಲ್ಲಿ ಆಕೆ ಏನು ಬರೆಯುತ್ತಾಳೆಂಬ ಕುತೂಹಲಕ್ಕಾದರೂ.....

ಇರಲಿ ನೀವು ಆ ಗುಟ್ಟನ್ನು ಬಿಟ್ಟುಕೊಡುವುದಿಲ್ಲ ಅಂತ ಗೊತ್ತಿದೆ. ತೀರ ಸೀರಿಯಸ್ಸಾಗಿ ತಲೆ ಕೆಡಿಸಿಕೊಂಡು ಬರೆಯೋ ಪ್ರಯತ್ನ ಮಾಡಬೇಡಿ.

ಜಿತೇಂದ್ರ

ತೇಜಸ್ವಿನಿ ಹೆಗಡೆ said...

ಜೋಮನ್ ಅವರೆ,

ಗಂಭೀರವಾದದ ವಿಷಯವೊಂದನ್ನು ಲಘುವಾಗಿ ವಿವವರಿಸುತ್ತಾ ಅದರ ಗಂಭೀರತೆಯನ್ನು ಮನದಟ್ಟುಮಾಡಲು ಯತ್ನಿಸಿದ್ದೀರಿ. ಪೆಕ್ರತ್ ನಂತಹ ಬ್ಲಾಗ್ ಬರಹಗಾರನನ್ನು ತಿಳಿಸಿಕೊಟ್ಟಿರುವುದಕ್ಕೆ ಧನ್ಯವಾದಗಳು.

ಎಷ್ಟೋ ಬರಹಗಾರರು ಮಧ್ಯರಾತ್ರಿಯಲ್ಲೋ, ಅಪರಾತ್ರಿಯಲ್ಲೋ ನಿದ್ದಿಯಿಂದೆದ್ದು ಬರೆಯುವುದುಂಟು..ಬಹುಶಃ ಆ ವೇಳೆಯಲ್ಲಿ ಪ್ರಕೃತಿ ನಿಃಶ್ಯಬ್ಧವಾಗಿರುವುದೇ ಇದಕ್ಕೆ ಕಾರಣವಾಗಿರಬಹುದು. ನಿದ್ದೆಗಾಗಿ ಆ ಕ್ಷಣ ಹೊಳೆದ ವಿಷಯವನ್ನು ಮರೆತುಬಿಡುವುದು ತಪ್ಪೆನಿಸದೇ? :-)

ನನಗೆ ಆ ಧಾರವಾಡದ ಹುಡುಗಿಯ ಬ್ಲಾಗ್ ವಿಳಾಸಕೊಡದಿದ್ದರೂ ಪರವಾಗಿಲ್ಲ :).. ಪೆಕ್ರತ್ ಬ್ಲಾಗ್ ವಿಳಾಸ ಸಿಗಬಹುದೇ?

ಶಾಂತಲಾ ಭಂಡಿ (ಸನ್ನಿಧಿ) said...

ಜೋಮನ್...
ಲೇಖನ ಇಷ್ಟವಾಯ್ತು. ಅದರೊಳಗಿನ ಸಂದೇಶ ಇನ್ನೂ ಇಷ್ಟವಾಯ್ತು.
ಹಾಗೆ ನೋಡಿದರೆ ನಿದ್ದೆಗಣ್ಣಲ್ಲಿ ಎದ್ದು ಬರೆಯುವವರು ತುಂಬ ಜನ ಇರಬಹುದಾ ಅಂತ! :)
ನಿಜ, ಸೀರಿಯಸ್ಸಾಗಿ ಅಂತಲ್ಲ, ಕೆಲವೊಮ್ಮೆ ಬರೆಯೋಕೆ ಭಯ.
ಒಳ್ಳೆಯ ಲೇಖನ ಕೊಟ್ಟಿದ್ದೀರಿ, ಧನ್ಯವಾದ.

ಮಲ್ಲಿಕಾಜು೯ನ ತಿಪ್ಪಾರ said...

Hey Joman wonderful writeup.. keep it up...

Nineno serious bareyoke hogidiya good aadre... Alliyu nin navirad hasya bittill annodokke E kelgani linegalu saku my dear friend----

ಹೌದಾ? ಹಾಗಾದರೆ ನಿಜವಾಗಿಯೂ ಆಕೆಗೇನಾದರೂ ತೊಂದರೆ ಇರಬೇಕು ಎಂದು ತಮಾಷೆ ಮಾಡಿದ್ದೆ. ನಾಲ್ಕು ಗಂಟೆಗೆ ಎದ್ದು ಬಿಸಿ ನೀರಿನಲ್ಲಿ ಸ್ನಾನ ಮಾಡಿ, ದೇವರನ್ನು ಮನಸ್ಸಿನಲ್ಲಿ ಧ್ಯಾನಿಸಿ, ಲ್ಯಾಪ್ ಟಾಪ್ ತೆಗೆದು, ಅದರಲ್ಲಿರುವ ಗಣಪತಿಯ ಫೋಟೋಗೆ ನಮಿಸಿ, ಕಿಟಕಿಯ ಪಕ್ಕದಲ್ಲಿ ಕುಳಿತು, ಬೀಸಿ ಬರುವ ತಂಗಾಳಿಗೆ ಮುಂಗುರುಳು ಸರಿಸುತ್ತಾ, ಮೃದು ಬೆರಳುಗಳ ತುದಿಯಿಂದ ಆಕೆ ಕಿ ಬೋರ್ಡ್ ಶಬ್ದ ಕೂಡ ಮಾಡದೆ ಒಂದೊಂದೇ ಅಕ್ಷರ ಬರೆಯುತ್ತಿದ್ದರೆ.. ನಾನಿಲ್ಲಿ ಮೈಮೇಲೆ ಆನೆ ಹತ್ತಿ ಇಳಿದರೂ ಎಚ್ಚರವಾಗದಷ್ಟು ಸುಖವಾಗಿ ಮಲಗಿ ನಿದ್ರಿಸುತ್ತಿದ್ದೇನಲ್ಲಾ ಅಂತ ನಗು ಬಂದಿತ್ತು. ನಿದ್ರೆಯನ್ನು ಬಲಿಗೊಟ್ಟು ಮಾಡುವ ಯಾವುದೇ ಕೆಲಸಗಳು ಒಳ್ಳೆಯದಲ್ಲ ಹುಡುಗಿ ಎಂದು ಆಕೆಗೆ ಹೇಳಬೇಕೆನಿಸಿತು.


Idannu odi tumba nakke

Mallikarjun

dinesh said...

'ಜೋ ಮನ್' ಮೆ ಆತಾ ಹೈ...ಅದು ಸುಂದರ ಬರಹವಾಗಿ ಮೂಡಿದೆ...

Anonymous said...

really nice

jomon varghese said...

@ ಜಿತೇಂದ್ರ,
cool.... ಹೊತ್ತಲ್ಲದ ಹೊತ್ತಿನಲ್ಲಿ ಆಕೆ ಏನು ಬರೆಯುತ್ತಾಳೆ ಎನ್ನುವ ಕುತೂಹಲ ನನಗೂ ಇದೆ ಸ್ವಾಮಿ, ಆದರೇನು ಮಾಡುವುದು? ನಾನು ಆ ಟೈಮ್‌ನಲ್ಲಿ ನಿದ್ರೆ ಮಾಡ್ತಾ ಇರ್ತೀನಲ್ಲ!

@ ತೇಜಸ್ವಿನಿ ಹೆಗಡೆ,
ನಿಮಗೂ ಧನ್ಯವಾದಗಳು. ನಿದ್ದೆಗಾಗಿ ಆ ಕ್ಷಣ ಹೊಳೆದ ವಿಷಯವನ್ನು ಮರೆತುಬಿಡುವುದು ತಪ್ಪೆನಿಸದೇ? :-) ಇದಕ್ಕೆ ಹೌದು ಎಂದೇ ಉತ್ತರ ಹೇಳಬೇಕು ( ನಮ್ಮಂತ ಸೋಮಾರಿ ಬ್ಲಾಗಿಗರನ್ನು ಕ್ಷಮಿಸಿ, ಹರಸಿ) ಪೆಕ್ರತ್‌ನ ಬ್ಲಾಗ್ ಲಿಂಕ್ಸ್ ಕೊಟ್ಟಿದ್ದೇನೆ.

@ ಶಾಂತಲಾ ಬಂಡಿ
ನಿಮ್ಮ ಪ್ರತಿಕ್ರಿಯೆಯೂ ತುಂಬಾ ಇಷ್ಟವಾಯಿತು. ಸೀರಿಯಸ್ಸಾಗಿ ಬರೆಯಿರಿ. ನಾವು ಓದುತ್ತೇವೆ.

@ ಮಲ್ಲಿಕಾರ್ಜುನ ತಿಪ್ಪಾರ,
ನಮಸ್ಕಾರ ಸಾರ್.. ನಡುನಡುವೆ ಲಘು ಹಾಸ್ಯವೂ ಅಷ್ಟಿಷ್ಟು ವಿನಯವೂ ಇಲ್ಲದಿದ್ದರೆ, ನೀನು ತುಂಬಾ ಸೀರಿಯಸ್ ಬಿಡಪ್ಪ ಅಂತಾ ನೀವೇ ಹೇಳ್ತೀರಿ. ಪ್ರತಿಕ್ರಿಯೆಗೆ ಧನ್ಯವಾದಗಳು.

@ ಮಲ್ಲಿಕಾರ್ಜುನ,
ಮಳೆಹನಿಗೆ ಸ್ವಾಗತ. ನಿಮ್ಮ ಸಹೃದಯ ಓದು, ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸ್ವಿನಿ said...

ಸೀರಿಯಸ್ ಆಗಿದ್ದು ಮುಗಿತು. :)
ಈಗ ಸ್ವಲ್ಪ ಮಳೆ ಬರಲಿ.
ಪೋಸ್ಟ್ ಮಾಡಿ ಬೇಗ.

Anonymous said...

Good one, informative.....

-Prasad.

Sree said...

ಹ್ಹ ಹ್ಹ! ಹೆದರೋವ್ರ್ ಮೇಲೆ ಕಪ್ಪೆ ಎಸ್ಯೋ ಥರ, ಮೊದ್ಲೇ ನಾವೆಲ್ಲ ಯಾವಾಗ್ ನೋಡಿದ್ರೂ ನೆನಪು, ಕವಿತೆ, ಕನಸು, ಮಳೆ ಅಂತಾ ಇರ್ತೀವಿ, ಇನ್ನು ನೀವ್ ಬೇರೆ ಹಂಗೆ ಶಿಕ್ಷೆ ಹಿಂಗೆ ಶಿಕ್ಷೆ ಅಂದ್ಮೇಲಂತೂ ಮುಗೀತು, ಕನ್ನಡ ಬ್ಲಾಗಿಗರು ಸೀರಿಯಸ್ಸಾಗಿ ಬರಿಯೋದಿಲ್ಲ ಅಂತ ಆರೋಪ ಮಾಡೋವ್ರಿಗೆಲ್ಲ ಮಳೆಹನಿಯ ಲಿಂಕ್ ಕೊಟ್ಟುಬಿಡ್ತೀವಿ;)
ಅಂದಹಾಗೆ ಪಲ್ಲವಿ ಬೆಳಗ್ಗಿನಜಾವ ಎದ್ದುಕೂತು ಚುಮುಚುಮು ಹೂಬಿಸಿಲಿನ ಥರಾನೇ ಬರೀತಾರೆ! ಅಡ್ರೆಸ್ ಹುಡುಕ್ತಿರೋ ಎಲ್ಲ ಹುಡುಗ್ರೂ ಸಂಪದ.ನೆಟ್ ನೋಡಿ:)

Sree said...

ಅಂದಹಾಗೆ ನನ್ನ ಬ್ಲಾಗ್ ಲಿಂಕ್ ಶ್ರೀರಾಗ ಅಂತ ಹಾಕಿ ಹೀಗೆಸುಮ್ಮ್ನೆ’ಯ ಲಿಂಕ್ ಕೊಟ್ಟಿದೀರ...ಅವು ನನ್ನ ಎರಡು ಬೇರೆ ಬೇರೆ ಬ್ಲಾಗುಗಳು:)

Jagali bhaagavata said...

ಹುಡುಗ್ರಾ,

ಯಾರಿಗೆಲ್ಲ ಆ ಬ್ಲಾಗ್ ಅಡ್ರೆಸ್ ಬೇಕು? ನಾನ್ ಕೊಡ್ತೀನಿ. ಆದ್ರೆ, ನಂಗೆ ಏನ್ ಕೊಡಿಸ್ತೀರಿ? :-)

jomon varghese said...

@ ದಿನೇಶ್
ನೈಸ್.. ಆಗಾಗ್ಗ ಬರುತ್ತಲಿರಿ, ಪ್ರತಿಕ್ರಿಯೆಗೆ ಧನ್ಯವಾದಗಳು.

@ ಮನಸ್ವಿನಿ
ಮಳೆ ಸುರಿಯಲಿದೆ ಕಾದು ನೋಡಿ. ಧನ್ಯವಾದಗಳು.

@ ಪ್ರಸಾದ್
ಮಳೆಹನಿಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು.

@ ಶ್ರೀ..
ಕವಿತೆ, ಕನಸು, ಮಳೆ, ಮನಸ್ಸು, ಇದರ ಕುರಿತೆಲ್ಲಾ ಬರೆಯೋ ಖುಷಿಯೇ ಬೇರೆ, ನಮಗ್ಯಾಕೆ ಬೇಕು ಸೀರಿಯಸ್ ಅಲ್ವಾ? ಸದ್ಯ ನಾನೂ ಸಂಪದದಲ್ಲಿ ಹುಡುಕುತ್ತಾ ಇದೀನಿ... ನನ್ನ ಹಾಗೆ ಹುಡುಕುತ್ತಿರುವವರಿಗೆ ನಿಮ್ಮ ಬ್ಲಾಗಿನ ಲಿಂಕ್ಸ್ ಕೊಟ್ಟಿದ್ದೀನಿ. (ಕೊಂಡಿ ಸರಿಪಡಿಸಿದ್ದೀನಿ) ಧನ್ಯವಾದಗಳು.

@ ಭಾಗವತರು,
ಭಾಗವತರೆ ನೀವು ಮೊದಲು ನನಗೆ ಅಡ್ರೆಸ್ ಕೊಡಿ ಮಾರಾಯ್ರೆ, ನಾನು ಎಲ್ಲರಿಗೂ ಸಮಾಧಾನ ಹೇಳಿ ಹೇಳಿ ಸಾಕಾಗಿದೆ. ನೀವು ಕೊಡದಿದ್ದರೆ, ನಿಮ್ಮ ಬಳಿ ಇದೆ ಎಂದು ನಿಮ್ಮ ಬ್ಲಾಗಿನ ಲಿಂಕ್ಸ್ ಇಲ್ಲಿ ಕೊಟ್ಟು ಬಿಡುತ್ತೀನಿ.

Raj Karanth said...

4 gantege edhu bareyuva blogger hudugi ada karana blogna vishayavannagi thakondidhirbahudu, suppose huduga agthidrenu aablogger bagge barethidra joman?just kidding:)

ಚಿತ್ರಾಕರ್ಕೇರಾ, ದೋಳ್ಪಾಡಿ said...

ಹಲೋ ಜೋಮನ್..
ಸೀರಿಯಸ್ ಬರಹವನ್ನು ಸೀರಿಯಸ್ ಆಗಿಯೇ ಓದಿದೆ..ಆದ್ರೆ ತೀರಾ ಸೀರಿಯಸ್ಸೂ ಆರೋಗ್ಯಕ್ಕೆ ಒಳ್ಳೆದಲ್ಲ (:) 'ಶರಧಿ'ಗೆ ಬಂದಿದ್ದಕ್ಕೆ ಕೃತಜ್ಷತೆಗಳು!
-ಚಿತ್ರಾ

ravi said...

ಹುಂಮ್... ದಾಳಿ ಮಾಡಿದವರ ವಾದ ಏನೆಂದರೆ... ಕ್ಯಾಥೋಲಿಕ್ ಚರ್ಚ್ ಗಳು ಈ ಹೋಸ ಸಂಘಟನೆಗಳಿಗೆ ತಮ್ಮ ಜಾಗವನ್ನು ಉಪಯೋಗಿಸಲು ಅನುಮತಿ ನೀಡಿವೆ ಎಂದು.